ಗೋವು ಭಾರತೀಯ ಸಂಸ್ಕೃತಿಯ ಅವಿಭಾಜ್ನಾಯ ಅಂಗ. ನಾವೆಂದೂ ಕಾಣದ ಮುಕ್ಕೋಟಿ ದೇವರುಗಳ ಮೂರ್ತರೂಪವಾಗಿ, ನಮ್ಮೆಲ್ಲರ ಮನೆಯ ಸದಸ್ಯನಾಗಿ ಅಷ್ಟೇ ಏಕೆ “ನೀನಾರಿಗಾದೆಯೋ ಎಲೆ ಮಾನವ…” ಎಂದು ನಮ್ಮನ್ನೇ ಪ್ರಶ್ನಿಸುವ ಮಟ್ಟಿಗೆ ಗೋವಿಗೆ ನಾವು ಅಧಿಕಾರವನ್ನು ಕೊಟ್ಟು ಬಿಟ್ಟಿದ್ದೇವೆ. ಕೆಲವು ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಗೋವಿಗೆ ಸುತ್ತಲಿನ ಪರಿಸರದಲ್ಲಾಗುವ ಅವಘಡಗಳು ಮೊದಲೇ ಗೊತ್ತಾಗುತ್ತವಂತೆ! ಮನೆಯ ಯಜಮಾನನಿಗೆ ಬರಬಹುದಾದ ಅವಘಡಗಳನ್ನು ತಾನೇ ಸ್ವೀಕರಿಸಿಬಿಡುತ್ತಂತೆ! ಗೋವು ನಮ್ಮ ದೇಶದ ಜನರ ಜೀವನದಲ್ಲಿ ಅದೆಷ್ಟು ಅಂತರ್ಗತವಾಗಿದೆಯೆಂದರೇ ಶತಮಾನಗಳ ಗುಲಾಮಿ ಮನಸ್ಥಿತಿಯಿಂದ ಸಿಡಿದೆದ್ದು ಒಂದು ಗಟ್ಟಿಯಾದ ಹೋರಾಟವನ್ನು ಸಂಘಟಿಸುವಂತೆ ಮಾಡಿದ್ದೂ ಗೋವೆ. ನೀವೇ ಯೋಚಿಸಿ ಕಾಡತೂಸುಗಳಿಗೆ ಬ್ರಿಟೀಷ್ ಅಧಿಕಾರಿಗಳು ಗೋಮಾಂಸವನ್ನು ಲೇಪಿಸದೇ ಹೋದರೆ ಅಲ್ಲೊಬ್ಬ ಮಂಗಲ್ ಪಾಂಡೆ ಸಿಡಿದೇಳುತ್ತಿದ್ದನೇ? ತೆರಿಗೆ ಕಿತ್ತುಕೊಂಡಾಗ, ಶೋಷಣೆ ಮಾಡಿದಾಗ ಸಹಿಸಿಕೊಂಡ ಜನ ಗೋವಿನ ವಿಚಾರಕ್ಕೆ ಅದೆಷ್ಟು ಬೇಗ ಸಂಘಟಿತರಾದರು. “ಕೂಕಾ ಆಂದೋಲನ”ದ
ಕೇಂದ್ರ ಬಿಂದುವೂ ಇದೇ ಗೋವು. ನನ್ನ ದೇಶದ ಜನರೇ ಹಾಗೆ ತನಗಿಂತ ತನ್ನ ಪರಂಪರೆ, ಧರ್ಮಗಳ ಬಗ್ಗೆ ಅತ್ಯಾದರ ಹೊಂದಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಂದಾಗ ಒಗ್ಗಟ್ಟಾಗಿದ್ದಾರೆ. ಅಲ್ಲಲ್ಲಿ ಚದುರಿದ ಹೋರಾಟಗಾರರನ್ನು ಧ್ರುವೀಕರಿಸಿ ಸ್ವಾತಂತ್ರ್ಯ ಎಂಬ ಏಕಗಮ್ಯದೆಡೆಗೆ ಸಾಗುವಂತೆ ಮಾಡಿದ್ದೇ ಗೋವು ಮತ್ತು ಆ ಹೋರಾಟದ ಬಿರುಗಾಳಿ ಅಧಿಕೇಂದ್ರ(Epicenter) ಗೋವು. ಈವತ್ತಿಗೂ ಗೋವಿನ ಬಗ್ಗೆ ಚರ್ಚೆಗಳು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಚಾಲ್ತಿಯಲ್ಲಿವೆ.
ಹೆಸರಾಂತ ಗೋ ರಕ್ಷಕ ಗೋ ಪ್ರೇಮಿ ಫೈಸ್ ಖಾನ್ ಅವರು ಗೋವಿನಿಂದ ಉತ್ಪತ್ತಿಯಾದ ಹಲವಾರು ಪದಗಳನ್ನು ನಮ್ಮ ಮುಂದಿಡುತ್ತಾರೆ. “ಗೋವಿನಿಂದ ಗೋತ್ರ , ‘ಗೋ’ಮುಖ (ಗೋವಿನ ಮುಖದಿಂದ ಬಂದ ಗಂಗೆ) , ‘ಗೋ’ದಾವರಿ , “ಗೋ”ಕುಲ , ‘ಗೋ’ಪಾಲಪುರ, ‘ಗೋ’ರಕ್’ಪುರ, ‘ಗೋ’ದ್ರಾ(ಗೋ=ಗೋವು, ದ್ರಾ=ಭೂಮಿ), ‘ಗೋ’ರಗಾಂವ, ‘ಗೋ’ವಾ, ಮಕ್ಕಳಿಗೆ ಇಟ್ಟ ಹೆಸರುಗಳು ‘ಗೋ’ಪಾಲ, ‘ಗೋ’ವಿಂದ ಎಲ್ಲ ಪದಗಳೂ ಉತ್ಪತ್ತಿಯಾದವು. ಪುತ್ರಿ ಎಂಬ ಪದದ ಮೂಲವು ಗೋವಿನಿಂದೇ ಬಂದಿದೆ. ಬೆಟ್ಟ ಗುಡ್ಡಗಳಲ್ಲಿ ಗೋವನ್ನು ಮೇಯಿಸಿಕೊಂಡು ಬರುವವನು ಪಾಲಿಸುವವನು “ಗೋ”ಪಾಲ. ಮನೆಯಲ್ಲಿ ಹಾಲುಕರೆಯುವವಳು “ದುಹಿತ್ರಿ” ಅದೇ ಮುಂದೆ ಪುತ್ರಿಯಾಯಿತು. ಮದುವೆಯಾಗುವ ಸುಮೂಹರ್ತವನ್ನು “ಗೋಧೂಳಿ” ಲಗ್ನವೆಂದು ಕರೆಯುತ್ತಾರೆ. “ಗೋ”ಷ್ಠಿ ಎಂದರೆ ಗೋವಿನ ಕುರಿತಾಗಿ ಮಾಡುವ ಚರ್ಚೆ. ಹಿಂದಿಯಲ್ಲಿನ ಗಾಂವ್ (ಹಳ್ಳಿ) ಪದದ ಅರ್ಥ ಎಲ್ಲಿ ಗೋವಿರುತ್ತದೋ ಅದೇ ಗಾಂವ್ ಆಯ್ತು. ಎಲ್ಲಿ ಗೋವಿರುತ್ತದೋ ಅದೇ ಗ್ರಾಮ. ಒಂದು ವೇಳೆ ಗೋವಿನ ರಕ್ಷಣೆಯ ವಿಚಾರಕ್ಕೆ ಎರಡು ಗ್ರಾಮಗಳ ನಡುವೆ ಯುದ್ಧವಾಯಿತೋ ಅದೇ ಸಂ”ಗ್ರಾಮ”ವಾಯಿತು.” ಹೀಗೆ ಗೋವಿನ ಕುರಿತು ಫೈಸ್ಖಾನ್ ಅಸ್ಖಲಿತವಾಗಿ ಮಾತಾಡುತ್ತಾ ಹೋಗುತ್ತಾರೆ.
ತಾವು ಗೋದಾವರಿಯ ಕಥೆ ಕೇಳಿದ್ದೀರಾ? ಹೌದು ನಮ್ಮ ದೇಶ ಪ್ರತಿ ನದಿ, ಭೂ ಭಾಗ, ಬೆಟ್ಟ ಗುಡ್ಡಗಳ ಹಿಂದೆಯೂ ಒಂದೊಂದು ಕಥೆಗಳಿವೆ. ಈ ಕಥೆಗಳೇ ಬಹುತೇಕ ಅವುಗಳ ಬಗ್ಗೆ ಈವತ್ತಿಗೂ ಅಭಿಮಾನ ಮೂಡುವಂತೆ ಮಾಡುತ್ತವೆ. ಪುರಾಣ ಕಥೆಗಳೆಲ್ಲ ಕಟ್ಟುಕಥೆಗಳು ಎನ್ನುವ ವಾದವಿದೆ. ಆದರೆ ಜನಸಾಮಾನ್ಯರಿಗೆ ಮನಮುಟ್ಟುವಂತೆ ಹೇಳಲು ಈ ಕಪೋಲ ಕಲ್ಪಿತ ಕಥೆಗಳ ಕೊಡುಗೆ ಅಪಾರ. ಆಗ ತಾನೆ ಕರುವಿನ ಜನ್ಮವಾಗಿತ್ತು. ತಾಯಿ ಅದನ್ನು ನೇವರಿಸಿ ಮುದ್ದಾಡುವ ಸಮಯಕ್ಕೆ ಗರುಡ ಬಂದು ಕರುವನ್ನು ಎತ್ತಿಕೊಂಡು ಹೋಯ್ತು. ಮೇಲೆ ಹಾರುವ ಗರುಡದಿಂದ ನೆಲದ ಮೇಲೆ ಮೂಡಿದ ನೆರಳನ್ನು ಹಸು ಬೆನ್ನಟ್ಟುತ್ತಾ ಹೋಯ್ತು. ಆಗ ಆ ಹಾದಿಯುದ್ದಕ್ಕೂ ಹಾಲು ಚೆಲ್ಲುತ್ತಾ ಹೋಯ್ತು. ಎಲ್ಲೆಲ್ಲಿ ಆ ಹಾಲು ಚೆಲ್ಲಿತ್ತೋ ಆ ಜಾಗದಲ್ಲಿ ಹರಿದ ನದಿಯೇ “ಗೋದಾವರಿ.” ಈ ಕಥೆಯನ್ನು ನೀವು ಒಪ್ಪದಿದ್ದರೂ ಜನಮಾನಸದಲ್ಲಿ ಇದರ ಅಸ್ತಿತ್ವವಿದೆ. ನಮ್ಮ ದೇಶ ಹೀಗೆ ನದಿಯೆಂದರೆ ನೀರಲ್ಲ ಗಂಗೆ, ಗಾಳಿಯೆಂದರೆ ದ್ರವ್ಯದ ಒಂದು ಸ್ಥಿತಿಯಲ್ಲ ಅದು ವಾಯುದೇವ, ತುತ್ತಿನ ಚೀಲ ತುಂಬುವುದಷ್ಟಕ್ಕೆ ಆಹಾರದ ಕೆಲಸವಲ್ಲ ಅದು ನಮ್ಮ ಪಾಲಿನ ಅನ್ನಪೂರ್ಣೇಶ್ವರಿ. ತಿರಂಗದ ಮಧ್ಯವೊಂದು ನೀಲಿ ಚಕ್ರದ ಬಟ್ಟೆ ಬರೀ ಬಟ್ಟೆಯಾಗದೇ ಧ್ವಜವಾಗಿ ಇಡೀ ದೇಶವನ್ನು ಒಕ್ಕಟ್ಟಾಗಿಸುತ್ತೆ ಮತ್ತು ಪ್ರತಿನಿಧಿಸುತ್ತದೆ. ಇದೆಲ್ಲವೂ ಹೇಗೆ ಸಾಧ್ಯವಾಯ್ತೆಂದರೆ ನಮ್ಮ ದೇಶದಲ್ಲಿ ಹಿರಿಯರು ಪ್ರತಿಯೊಂದು ಘಟನೆಗಳನ್ನೂ, ವಸ್ತುಗಳನ್ನೂ, ಆಚರಣೆಗಳನ್ನೂ ಧರ್ಮ ಅಧ್ಯಾತ್ಮದ ಜೊತೆಗೆ ಬೆಸೆದು ಬಿಟ್ಟಿದ್ದಾರೆ. ಗೋದಾವರಿಯ ಕಥೆಗಳಂತವು ಪುರಾಣಗಳಿಂದ ಸೃಷ್ಟಿಯಾದರೂ ಅದನ್ನು ತನ್ನದೇ ಮಗುವೆಂಬಂತೆ ಎತ್ತಿ ಆಡಿಸಿ ಮುಂದಿನ ಪೀಳಿಗೆಗೆ ದಾಟಿಸಿದ್ದು ಜನಪದ.
ಗೋವಿನ ಕುರಿತಾಗಿ ಮಾತಾಡುತ್ತಾ ಹೋದರೆ ಅದೆಷ್ಟೋ ವಿಷಯಗಳಿವೆ. ಈಗ ಈ ಬರಹದ ಶೀರ್ಷಿಕೆಯ ಕಡೆಗೆ ಮರಳುವ ಸಮಯ ಅದು “ಪುಣ್ಯಕೋಟಿ ಹೇಳುವ ಕೋಟಿ ಕಥೆಗಳು”. ಈಗಾಗಲೇ ಗೋವಿನೊಂದಿಗೆ ಬೆಸೆತುಕೊಂಡು ಗೋದಾವರಿಯ, ಪ್ರಥಮ ಸ್ವತಂತ್ರ ಸಂಗ್ರಾಮದ ಕಥೆಗಳನ್ನು ಹೇಳಿದೆ. ಆದರೆ ಪುಣ್ಯಕೋಟಿಯ ಕಥೆಗೆ ಬರಲಿಲ್ಲ. ಪುಣ್ಯಕೋಟಿಯ ಕಥೆ ಮತ್ತು ಹಾಡಿನ ಇತಿಹಾಸ, ಅದರ ರಚನೆಯಾದ ರೀತಿ, ಅದು ಜನಪದವೋ? ಅಥವಾ ಯಾರಿಂದಲಾದರೂ ರಚಿಸಲ್ಪಟ್ಟಿದ್ದೋ? ಆ ಇಡೀಯ ಕಥೆ ಬರೀ ಪ್ರಾಮಾಣಿಕತೆಯ ಪ್ರತಿಬಿಂಬವಾ? ಗೋವಿನ ಹಾಡು ಅಥವಾ ಪುಣ್ಯಕೋಟಿಯ ಕಥೆ ನನಗೆ ದಕ್ಕಿದಷ್ಟು ಹೇಳಲು ಪ್ರಯತ್ನಿಸುತ್ತೇನೆ. ಈ ಸರಣಿ ಬರಹಗಳ ಹೆಸರೇ ಚಿತ್ರ ಪಾತ್ರ ಎಂದಿದೆ. ಗೋವು ನಮ್ಮೊಂದಿಗೆ ಬೆಸೆತುಕೊಂಡು “ಚಿತ್ರ”ಣ ನಿಮ್ಮ ಮುಂದಿಟ್ಟಾಯಿತು. ಗೋವಿನ ಹಾಡಿನಲ್ಲಿ ಬೇರೆ-ಬೇರೆ ಪಾತ್ರದ ಕುರಿತು ಹೇಳುವೆ.
ಗೋವಿನ ಹಾಡಿನಲ್ಲಿ ಒಟ್ಟಾರೆ 137 ಪದ್ಯಗಳಿದ್ದು, 114 ಮೂಲ ಮಿಕ್ಕದ್ದು ಪ್ರಕ್ಷಿಪ್ತ ಎಂಬ ಮಾತಿದೆ. ಕೆಲವು ಉಲ್ಲೇಖಗಳ ಪ್ರಕಾರ ಇದು 1800 ವರ್ಷಗಳ ಹಿಂದಿನ ರಚನೆ. ಹಾಡಿನ ಕೊನೆಗೆ ಮದ್ದೂರಿನ ನರಸಿಂಹ ದೇವರ ಹೆಸರಿರುವುದರಿಂದ ರಚಿಸಿದ ಕವಿ ಆ ದೇವರ ಭಕ್ತನಾಗಿರಬಹುದು ಎಂಬ ಮಾತುಗಳಿವೆ. ಅಚ್ಚುಕಟ್ಟಾದ ಛಂದಸ್ಸು ಗೇಯತೆ ಇರುವ ಹಾಡು ಕವಿಯಿಂದ ರಚಿಸಲ್ಪಟ್ಟಿದ್ದೇ ಹೊರತು ಜನಪದವಲ್ಲ ಎಂಬ ಕೆಲವು ವಾದಗಳೂ ಇವೆ. ಆದರೆ ಜನಪದದ ವಿಶೇಷವೆಂದರೆ ಪ್ರಾದೇಶಿಕ ಸೊಗಡಿನ ಯಾವುದೇ ವಿಷಯವಾದರೂ ಎದೆಗವಚಿಕೊಂಡು ಬೆಳೆಸುತ್ತದೆ. ಮುಂದಿನ ಪೀಳಿಗೆಗೆ ದಾಟಿಸುತ್ತದೆ.
“ಧರಣಿ ಮಂಡಲ ಮಧ್ಯದೊಳಗೆ…” ಹಾಡು ನಮ್ಮ ದೇಶದಲ್ಲಿ ಹುಟ್ಟಿದ ಪ್ರತಿ ವ್ಯಕ್ತಿಗೂ ಪ್ರಾಥಃ ಸ್ಮರಣೆ. ಅದನ್ನು ಪರಿಚಯಿಸುವ ಅವಶ್ಯಕತೆ ಇಲ್ಲ. ಪ್ರಾಮಾಣಿಕತೆಯ ದ್ಯೋತಕವಾದ ಪುಣ್ಯಕೋಟಿಯ ಪಾತ್ರ, ಮಾತೃವಾತ್ಸಲ್ಯ ಇವು ಹಾಡಿನ ಮುಖ್ಯ ಅಂಶಗಳು. ಆದರೆ ಹಾಡಿನ ಸಾಲು ಸಾಲನ್ನು ನೋಡಲಾಗಿ ನಮಗೆ ಇನ್ನೂ ಬೇರೆ ಬೇರೆ ಅಂಶಗಳು ಗಮನಕ್ಕೆ ಬರುತ್ತವೆ.
ಹಾಡಿನಲ್ಲಿನ ಹಸುಗಳಿಗಿಟ್ಟ ಹೆಸರುಗಳು ನೋಡಿ ಗಂಗೆ, ಗೌರಿ, ತುಂಗ ಭದ್ರೆ, ಕಾಮಧೇನು(ಕೇಳಿದ್ದನ್ನು ಕೊಡುವ ದೇವಲೋಕದ ಗೋವು), ಪುಣ್ಯಕೋಟಿ, ಪುಣ್ಯ ವಾಹಿನಿ, ಪೂರ್ಣ ಗುಣ ಸಂಪನ್ನೆ ಎಲ್ಲವೂ ದೇಸಿ ಹೆಸರುಗಳು. ನಾವು ಇತ್ತೀಚೆಗೆ ಇಂಥ ಹೆಸರುಗಳನ್ನು ಇಡುವುದನ್ನೇ ಬಿಟ್ಟಿದ್ದೇವೆ. ಮನೆಯ ಮಗಳಿಗೂ ನಾಯಿಗೂ ಒಂದೇ ರೀತಿಯ ಹೆಸರಿಡುವ ಕಾಲವಿದು.
ಇಡಿಯ ಪದ್ಯದಲ್ಲಿ ರಸಪಲ್ಲಟವನ್ನು ಗಮನಿಸಿ.ಎಳೆಯ ಮಾವಿನ ಮರದ ಕೆಳಗೆ ಕುಳಿತು ಕೊಳಲನೂದುತ ಹಸುಗಳನ್ನು ಕರೆದು ಅವುಗಳು ಗುಂಪು ಗುಂಪಾಗಿ ಮೇಯಲು ಹೊರಟು ಕಾಡಿನ ಮಧ್ಯದಲ್ಲಿ ಕಳೆದು ಹೋಗುವವರೆಗೆ ಶಾಂತ ರಸದ್ದೇ ಪ್ರಾಧಾನ್ಯತೆ.
“ಹಬ್ಬಿದಾ ಮಲೆಮಧ್ಯದೊಳಗೆ ಅರ್ಭುತಾನೆಂತೆಂಬ ವ್ಯಾಘ್ರನು
ಗಬ್ಬಿತನದೊಳು ಬೆಟ್ಟದಾ ಅಡಿ ಕಿಬ್ಬಿಯೊಳು ತಾನಿರುವನು
ಒಡಲಿಗೇಳು ದಿವಸದಿಂದ ತಡೆದಾಹಾರವ ಬಳಲಿ ವ್ಯಾಘ್ರನು
ತುಡುಕಿ ಎರೆದವ ರಭಸದಿಂದೊಗ್ಗೊಡೆದವಾಗಾ ಗೋವ್ಗಳು”
ಭಯಾನಕ ರಸ.
“ಖಂಡವಿದೆಕೋ ಮಾಂಸವಿದೆಕೋ ಗುಂಡಿಗೆಯ ಬಿಸಿ ರಕ್ತವಿದೆಕೋ..”
ಹುಲಿಯ ಆಹಾರ ಸೇವನೆ ಅದೆಂಥ “ಭೀಬತ್ಸ”ಕರ!
“ಆರ ಮೊಲೆಯಾ ಕುಡಿಯಲಮ್ಮ ಆರ ಸೇರಿ ಬದುಕಲಮ್ಮ
ಆರ ಬಳಿಯಲಿ ಮಲಗಲಮ್ಮ ಆರು ನನಗೆ ಹಿತವರು”
“ಕರುಣ” ರಸ. ಯಾವುದೇ ಪದವೀಧರನೂ ಈ ಮಟ್ಟಿಗೆ ರಸವತ್ತಾದ ಕಾವ್ಯವನ್ನು ಕಟ್ಟಲಾರ. ಪದ್ಯದುದ್ದಕ್ಕೂ ಅರೆಕ್ಷಣವೂ ರಸಭಂಗವಾಗದಂತೆ ಒಂದು ರಸದಿಂದ ಮತ್ತೊಂದು ರಸಕ್ಕೆ ಜಿಗಿದಿದ್ದಾನೆ. ಅದಕ್ಕೆ ನಾನು “ರಸಪಲ್ಲಟ” ಎಂಬ ಪದ ಬಳಸಿದೆ. ಬರೆದಾತ ಭಾಷೆಯನ್ನು ಕಲಿತಿಲ್ಲ ಬದಲಿಗೆ ಆವ್ಹಾಹಿಸಿಕೊಂಡಿದ್ದಾನೆ. ಅವನು ಕಟ್ಟಿಕೊಡುವ ಪ್ರಕೃತಿ ಸೌಂದರ್ಯ ಪ್ರಕೃತಿಯ ಮಧ್ಯೆ ಇರುವವನಿಗೆ ಮಾತ್ರ ಸಾಧ್ಯ. ನಾವು ಬೆಳೆಯುವ ಪರಿಸರ ನಮ್ಮ ನಡೆ-ನುಡಿ, ಓದು, ಬರಹ ಎಲ್ಲದರಲ್ಲೂ ಛಾಪು ಒತ್ತುತ್ತದೆ.
ಮತ್ತಷ್ಟು ಈ ಹಾಡನ್ನು ವಿಮರ್ಶೆಗೆ ಹಚ್ಚಿದರೆ ಇಲ್ಲಿ “ಕರುಣ” ರಸ ಹಸು-ಕರುಗಳ ಮಧ್ಯವಷ್ಟೇ ಇಲ್ಲ. ಹಾಡಿನ ಕೊನೆಗೆ ಪುಣ್ಯಕೋಟಿ- ಅರ್ಬುತನ ನಡುವೆಯೂ ಇದೆ. ಯಾವ ಹುಲಿಯೂ ತನ್ನ ಬಲಿಯೆಡೆಗೆ ಕರುಣೆ ತೋರದು. ಅದಕ್ಕೆ ಅದರ ಹಸಿವೆಯೇ ದೊಡ್ಡದು. ಕರುವಿಗೆ ಹಾಲುಣಿಸಲು ಕಳಿಸಿದ ಆ ವ್ಯಾಘ್ರನಲ್ಲಿ ಅದೆಂಥ ಕರುಣೆ ಇರಬಹುದು. ಸತ್ಕಾರ್ಯವನ್ನು ಮಾಡುವ ಇಚ್ಛೆಯಿದ್ದರೇ ದೇವರೇ ದಾರಿ ತೋರುತ್ತಾನೆ. ಕರುವಿಗೆ ಹಾಲುಣಿಸುವ ಕಾರ್ಯಕ್ಕೆ ವ್ಯಾಘ್ರನಂತ ವ್ಯಾಘ್ರನೇ ಅಸ್ತು ಅನ್ನೋದಕ್ಕೆ ಪುಣ್ಯಕೋಟಿಯ ಮನದಲ್ಲಿರುವ ಒಳ್ಳೆಯ ಭಾವವೇ ಕಾರಣ. ಬರುವುದೇ ಇಲ್ಲ ಎಂದು ತಿಳಿದ ಪುಣ್ಯಕೋಟಿಯ ಆಗಮನ ನೋಡಿದ ತಕ್ಷಣಕ್ಕೆ ಅರ್ಬುತನಿಗೆ ಅದೆಂಥಾ ಪಾಪಪ್ರಜ್ಞೆ ಮೂಡಿರಬಹುದು. ಇತ್ತೀಚೆಗೆ ಎಡಪಂಥೀಯ ಚಿಂತನೆಯುಳ್ಳ ಮಹಿಳೆಯೊಬ್ಬಳು “ಓಹ್ ಹಸು ಪ್ರಾಮಾಣಿಕ ಎಂದ ಮಾತ್ರಕ್ಕೆ ಹುಲಿ ತಿನ್ನದೇ ಇರೋದಕ್ಕೆ ಆಗುತ್ತಾ? ಅದು ಹಸಿವಿನಿಂದ ಸಾಯಬೇಕಾ?” ಎಂದು ಪ್ರಶ್ನಿಸಿದಳು. ಪ್ರತಿಯೊಂದನ್ನೂ ತರ್ಕದ ನೆಲೆಗಟ್ಟಿನ ಮೇಲೆ ನೋಡಿದಾಗ ಕಾವ್ಯದ ಸೌಂದರ್ಯ ಮತ್ತು ನೀತಿಗಳು ನಮಗೆ ದಕ್ಕುವುದಿಲ್ಲ. ಹಸುವಿನ ಸಾತ್ವಿಕತೆ ವ್ಯಾಘ್ರನಲ್ಲೂ ಪಾಪಪ್ರಜ್ಞೆ ಹುಟ್ಟಿಸುವಂತೆ ಮಾಡಿತು. ಅಷ್ಟೇ ಅಲ್ಲದೇ ವ್ಯಾಘ್ರನೊಳಗೂ ಕರುಣೆ ಇದೆ. ಪಾಪಪ್ರಜ್ಞೆ ಇದೆ. ಅದು ಹೊರ ಬರಬೇಕಾದರೆ ಸುತ್ತಲಿನ ಪರಿಸರಗಳು ಪೂರಕವಾಗಿರಬೇಕು.
ಇಂಥ ಹಲವು ಉದಾಹರಣೆಗಳನ್ನು ಕೊಡಬಹುದು.
ರಾಮಕೃಷ್ಣರ ಜೀವನದಲ್ಲಿ ಒಂದು ಘಟನೆ ಬರುತ್ತೆ. ಗಿರೀಶ್ ಚಂದ್ರ ಘೋಷ್ ಅಂತ ಬಂಗಾಳದ ನಾಟಕದ ಪಿತಾಮಹನೆಂದು ಕರೆಯುತ್ತಾರೆ. ಅವರಿಗೆ ಕುಡಿತ ಮತ್ತು ಹೆಣ್ಣಿನ ಚಟವಿತ್ತು. ಆದರೆ ರಾಮಕೃಷ್ಣರ ಶಿಷ್ಯ. ಒಂದು ದಿನ ಅವರ ಹತ್ತಿರ ಬಂದು “ ನಾನು ಮಾಡುತ್ತಿರುವುದು ತಪ್ಪು ಅಂತ ಗೊತ್ತು ಏನು ಮಾಡಲಿ.” ಅಂದ. ರಾಮಕೃಷ್ಣರು “ನನಗೆ ವಕಾಲತ್ತು ಕೊಟ್ಟುಬಿಡು ಉಳಿದಿದ್ದು ನೀನೇದಾರೂ ಮಾಡಿಕೊ.” ಅಂದರು. ವಕಾಲತ್ತು ಕೊಡೋದು ಅಂದರೆ ಗಿರೀಶ್ ಚಂದ್ರ ಘೋಷ್ ಮಾಡುವುದೆಲ್ಲವನ್ನೂ ರಾಮಕೃಷ್ಣರಿಗೆ ಅರ್ಪಿಸಿದಂತೆ. ಇಷ್ಟಾದ ಮೇಲೆ ಅವನು ಹೋಗಿ ಹೆಂಡದ ಬಾಟಲಿಯ ಮುಂದೆ ಕೂತಾಗ ಮತ್ತು ಹುಡುಗಿಯ ಜೊತೆಗೆ ಸಂಪರ್ಕ ಮಾಡುವಾಗ ಅವನಿಗೆ “ನನ್ನ ವಕಾಲತ್ತನ್ನು ರಾಮಕೃಷ್ಣರು ತೆಗೆದುಕೊಂಡಿದ್ದಾರೆ. ನಾನು ಕುಡಿದು ಇದನ್ನು ಹೇಗೆ ಅವರ ತಲೆಗೆ ಹಚ್ಚೋದು. ಈ ಹುಡುಗಿಯ ಸಹವಾಸ ಹೇಗೆ ಮಾಡೋದು.” ಅನ್ನಿಸಲು ಶುರುವಾಯಿತು. ಆಗ ಬಂದು ರಾಮಕೃಷ್ಣರಿಗೆ “ನನ್ನಿಂದ ಯಾವ ತಪ್ಪು ಮಾಡಲಿಕ್ಕೆ ಆಗುತ್ತಿಲ್ಲ ನನಗೆ ಏನು ಮಾಡಿಬಿಟ್ಟಿರಿ ನೀವು?” ಎಂದು ಕೇಳಿದ. ನೋಡಿ ಅಂತ ವ್ಯಾಘ್ರನಲ್ಲಿ ಸಾತ್ವಿಕತೆ ಜನನವಾಗಿದ್ದು ರಾಮಕೃಷ್ಣರಂಥ ಶ್ರೇಷ್ಟರಿಂದ. ಸಾವಿರಾರು ಜನರನ್ನು ಕೊಂದು ಬೆರಳುಗಳ ಮಾಲೆಯನ್ನು ಕೊರಳಿಗೆ ಹಾಕಿಕೊಂಡು ಊರೂರು ಸುತ್ತುತ್ತಿದ್ದ “ಅಂಗುಲಿ ಮಾಲ”ನನ್ನು “ಬುದ್ಧ” ತನ್ನ ನಗೆಯಿಂದಲೇ ಕೊಂದು ಬಿಟ್ಟ.
ಇವೆರಡೂ ಅಧ್ಯಾತ್ಮದ ಕಥೆಗಳಾದರೆ ಸಿನಿಮಾಗಳೂ ಇದರ ಹೊರತಾಗೇನೂ ಇಲ್ಲ. ಸುಂದರವಾದ ಹುಡುಗಿಯನ್ನು ಅನುಭವಿಸಲೇ ಬೇಕು ಎಂದು ಬಯಸಿದ “ಎಡಕಲ್ಲು ಗುಡ್ಡದ ಮೇಲೆ” ಚಿತ್ರದಲ್ಲಿನ ಕಾಮದ ನಂಜನ್ನು ಉಂಡ “ನಂಜುಂಡ”ನನ್ನು ಸರಿದಾರಿಗೆ ತರುವ “ದೇವಕಿ”ಯದ್ದು ಇದೇ ವಿಚಾರದ ಛಾಪು. ಎಲ್ಲಿಂದಲೋ ಎಲ್ಲಿಗೋ ಜೋಡಿಸುತ್ತೀನಿ ಅನ್ನಬೇಡಿ. ಚಿತ್ರದ ಮೊದಲು ಪುಟ್ಟಣ್ಣನವರು ಅರಿ ಷಡ್ವರ್ಗಗಳ ಕುರಿತು ಹೇಳಿಯೇ ಶುರುಮಾಡುತ್ತಾರೆ. ತೀರಾ ಇತ್ತೀಚೆಗೆ ಒಂದು ಸಿನಿಮಾ ಬಂತು. “ರಾಮಾ ರಾಮಾ ರೇ” ಎಂದು ಹೆಸರು. ತಾವು ನೋಡಿಲ್ಲವೆಂದಾದರೆ ನೋಡಿ. ಅದರಲ್ಲಿ ಗಲ್ಲುಗಂಬ ಏರಬೇಕಾದ ಖೈದಿ ತಪ್ಪಿಸಿಕೊಂಡು ಬಿಡುತ್ತಾನೆ. ಕಾಕತಾಳೀಯವೇನೋ ಎಂಬಂತೆ “ಪಾಸೀದಾರ”ನ ಜೊತೆಗೆ ಸೇರಿಬಿಡುತ್ತಾನೆ. ಇವನು ಖೈದಿ ಎಂದು ಆತನಿಗೂ ಆತ ಪಾಸಿದಾರ ಎಂದು ಇವನಿಗೂ ಗೊತ್ತೇ ಆಗುವುದಿಲ್ಲ. ಸಿನಿಮಾದುದ್ದಕ್ಕೂ ನಡೆಯುವ ಘಟನೆಗಳು ಅವನಲ್ಲಿ ಅದೆಂಥ ಬದಲಾವಣೆ ತರುತ್ತದೆಂದರೆ ತಾನೇ ಬಂದು ಶರಣಾಗುತ್ತಾನೆ.
ಪುಣ್ಯಕೋಟಿಯ ಸತ್ವಕ್ಕೆ ವ್ಯಾಘ್ರ ತನಗೆ ತಾನೆ ಬಲಿಯಾಗುವಂತೆ. ಪುಣ್ಯಕೋಟಿಯಿಂದ ಎತ್ತಿಕೊಂಡಿದ್ದು ಎಂದು ಹೇಳಲಾರೆ ಬದಲಿಗೆ ಸಾತ್ವಿಕ ಶಕ್ತಿಯೊಂದು ದುಷ್ಟ ಶಕ್ತಿಯನ್ನು ಕೊಲ್ಲಬಲ್ಲದು ಎಂಬ ಏಕೈಕ ವಿಚಾರ ಪುರಾಣ, ಇತಿಹಾಸ, ಸಿನಿಮಾ, ನಾಟಕಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಅನಾವರಣವಾಗಿದೆ.
ಕಥೆ ಹೇಳುವ ನೀತಿ ಪ್ರಾಮಾಣಿಕತೆಯೊಂದೇ ಅಲ್ಲ. ಪ್ರಾಮಾಣಿಕವಾಗಿದ್ದ ವ್ಯಕ್ತಿ ಎದುರಿಗಿರುವ ವ್ಯಾಘ್ರನನ್ನೂ ಸೋಲಿಸಬಲ್ಲ, ಮನುಷ್ಯ ಅದೆಂಥ ಕಠೋರನಾದರೂ ಅವನಲ್ಲೂ ಕರುಣೆ, ಪಾಪಪ್ರಜ್ಞೆ ಇದೆ. ಅದಕ್ಕೊಂದು ಸಮಯ ಬರಬೇಕು. ಪ್ರತಿ ಮನುಷ್ಯನಿಗೂ ಬದಲಾಗುವುದಕ್ಕೆ ಬದುಕು ಒಂದು ಅವಕಾಶವನ್ನು ಎಸೆಯುತ್ತದೆ. ಅರ್ಬುತ, ಗಿರೀಶ್ ಚಂದ್ರಘೋಷ್, ಅಂಗುಲಿ ಮಾಲಾ, ನಂಜುಂಡ, ಗಲ್ಲಿಗೇರಬೇಕಾದ ಖೈದಿ ಇವೆಲ್ಲಾ ಉದಾಹರಣೆಗಳು. ಕೆಲವೊಮ್ಮೆ ಬದುಕೇ ಗುರುವಾಗಿ ಬದಲಿಸುತ್ತೆ. ಕೆಲವೊಮ್ಮೆ ಗುರುಗಳು ಸಿಗುತ್ತಾರೆ.
ನೋಡಿ ನಾವು ಪುಣ್ಯಕೋಟಿಯ ಪಾತ್ರದ ಮುಖೇನ ಕಥೆಯನ್ನು ನೋಡಿದಾಗ ಪ್ರಾಮಾಣಿಕತೆ ಮಾತ್ರ ಕಂಡಿತು. ಅದೇ ಅರ್ಬುತನ ಮೂಲಕ ನೋಡಿದಾಗ ಕಥೆಯ ಎಷ್ಟೋ ರೂಪಗಳು ಕಂಡವು. ಕಥೆ ನನಗೆ ದಕ್ಕಿದಷ್ಟೇ ನಾನು ಹೇಳಬಲ್ಲೆ.
ಕಥೆಗೆ ಮತ್ತೊಂದು ಆಯಾಮವನ್ನೇ ಕೊಟ್ಟ ಆ ಅರ್ಬುತಾ ಯಾರು? ಅವನ ಹಿನ್ನೆಲೆ ಏನು? ಈ ಕಥೆ ಮುಗಿದ ನಂತರ ಆತ ತೀರಿ ಹೋದನೇ? ಎಲ್ಲಿ ಹೋದ? ಏನಾದ? ಮುಂದಿನ ಬರಹದಲ್ಲಿ ಅರ್ಬುತನ ಬಗ್ಗೆ ತಿಳಿಯೋಣ.
-ರಾಹುಲ್ ಹಜಾರೆ